ನಿಂಗಪ್ಪಣ್ಣಯ್ಯಂಗೆ ಹಿಡ್ದ್ ದೆಯ್ಯ ಬಿಡಿಸೋಕ್ ಹೋಗಿ...
- ವನಜಾ ಸುರೇಶ್
ಚಿಕ್ಕವನು ಅಮ್ಮನೊಂದಿಗೆ ಇದ್ದುದ್ದು ಕಡಿಮೆಯೇ!
ಅಪ್ಪ ಜೊತೆಗಿದ್ದುದು ಕಡಿಮೆಯಾದರೂ ಎಲ್ಲ ಯೋಗ ಕ್ಷೇಮವನ್ನು ತಾನೆ ನೋಡಿಕೊಳ್ಳುತ್ತಿದ್ದ. ಒಂದಷ್ಟು ದಿನ ಅಪ್ಪನೊಂದಿಗೆ ಮಠದಲ್ಲೇ ಇದ್ದನಾದರೂ ಕ್ರಮೇಣ ಇವನನ್ನು ಜೊತೆಗಿಟ್ಟು ಕೊಂಡರೆ ತನ್ನ ಗೌಪ್ಯ ವ್ಯವಹಾರಗಳಿಗೆ ತೊಡಕಾದಾವೆಂದು ಇವನನ್ನು ಅಲ್ಲಿ ಇಲ್ಲಿ ಆಶ್ರಮಶಾಲೆಗಳಲ್ಲೇ ಇಟ್ಟು ಬೆಳಸತೊಡಗಿದ್ದ. ರಜಾ ಅವಧಿಗಳಲ್ಲಿ ವಿಶೇಷ ಸಂದರ್ಭಗಳಲ್ಲಿ ತಂದೆಯೊಂದಿಗೆ ಮಠದಲ್ಲಿ ನೆಲೆಸುತ್ತಿದ್ದ ಮಠದ ಇತರ ಶಿಷ್ಯರಂತೆ ತಾನು ಒಬ್ಬ ಶಿಷ್ಯನಾಗಿ ಕಾಲ ಕಳಿಯೋದಕ್ಕೇನು ಅಡ್ಡಿ ಇರಲಿಲ್ಲ. ಹಾಗಾಗಿ ಇವನಿಗೂ ಮಠಮಾನ್ಯಗಳೆ ಮನೆಗಳಿಗಿಂತ ಸೌಖ್ಯ ಕಷ್ಟಪಡುವಂತಿಲ್ಲ .ಬಿಸಿಲು ಮಳೆ ಹಸಿವು ದುಡಿಮೆ ಸಂಕಷ್ಟಗಳ ಗೋಜಲುಗಳಿಲ್ಲದೆ ಸಲೀಸಾದ ಬದುಕು ಎಂದು ಕೊಡುವಾಗ ಅವನಿಗೆ ತನ್ನ ತಾಯಿ ಅಣ್ಣಂದಿರ ಸಂಕಷ್ಟಗಳ ನೆನಪಾಗುತ್ತಿತ್ತು. ಊಟ ಬಟ್ಟೆಗೆ ತೊಡಕಿಲ್ಲವಾದ್ರೂ ಗುಂಡ್ರು ಗೋವಿ ತರ ಇದೀನಿ ಯಾರು ಬಾ ಅನ್ನೋವ್ರಿಲ್ಲ ಪ್ರೀತಿ ತೋರ್ಸೋರಿಲ್ಲ.
ಮಠಕ್ಕೆ ಬರೋ ಭಕ್ತ ತಾಯಂದಿರು ಮಕ್ಕಳನ್ನು ಕಂಡಾಗಲೆಲ್ಲಾ ಮನಸ್ಸು ತಾಯಿ ಬೇಕು ಅನ್ನಿಸ್ತಾ ಇದೆ. ಈ ತಂದೆ ಅನ್ನಿಸ್ಕೊಂಡು ಮನುಷ್ಯ ಮನೆಯಲ್ಲಿದ್ದು ಅವಳ ಕಡೆ ವಸಿ ಕಾಳಜಿ ತೋರಿಸಿದ್ರೆ ಅವ್ವಾ ಉಳೀತಿದ್ಲು ದುಡಿಯೋ ಭರ ಮಕ್ಕಳ ಹೊಟ್ಟೆ ಸಾಕೋ ಹೊಣೆ, ನಾನು ಚೆನ್ನಾಗಿದ್ದೇನು ಜವರಾಯನ ಮನೇಲೀ ತುಪ್ಪ ಬಸೀ ಬೇಕಾ? ಸೇರಿದ್ದ ಮನೆಯಲ್ಲಿ ಜೀವ ತೇದು ಮಕ್ಕಳು ಮನೆಮಠ ಉಳಿಸದಿದ್ರೆ ಭೂಮಿ ಮೇಲೆ ಹುಟ್ಟಿದ್ದಕ್ಕೆ ಬೆಲೆ ಏನ್ ಬಂತು? ಕೊಟ್ಟ ಮನೆಗೆ ಬೆಳಕಾಗು, ಅಪ್ಪ ಊರಿಗೆ ಕೆಟ್ಟ ಹೆಸರು ತರಬೇಡ ಅಂತ ಹೇಳಿ ಕಳಿಸಿದ ನಮ್ಮವ್ವನ ಮಾತು ಉಳಿಸ್ಬೇಡ್ದಾ ಅಂತಾನೇ ಬದುಕನ್ನ ಉದಾಸಿನ ಮಾಡ್ಕೊಂಡ್ಲು ಅವಳ ಜೊತೆಯಲ್ಲಿ ಬಲಗೈಯಾಗಿ ನಿಂತ ಅಣ್ಣ ಅವನಾದ್ರು ಇರಬೇಕಾಗಿತ್ತು. ಸುರಳಿಯಂತೆ ನೆನಪುಗಳು ಬಿಚ್ಚಿಕೊಳ್ಳತೊಡಗಿದವು.
ಗಾಡಿ ಹೂಡಿಕೊಂಡು ಊರೂರುಗಳ ಮೇಲೆ ಬಂದು (ಅಕ್ಕಿ ಪಡಿ)ದವಸ ಧಾನ್ಯಗಳನ್ನ ಸಂಗ್ರಹಿಸ ಬಂದ ಶಿಷ್ಯರೊಂದಿಗೆ ಮಠಕ್ಕೆ ದೇಣಿಗೆ ಸಂಗ್ರಹಿಸಲು ಊರು ತಿರುಗುತಾ ಇದ್ದ ತಂದೆ ಮನೆಗೆ ಅತಿಥಿಯಾಗಿದ್ದ ತಾಯಿ ತನ್ನ ಮಕ್ಕಳನ್ನು ಕಟ್ಟಿಕೊಂಡು ಜಮೀನಿನಲ್ಲಿ ಉತ್ತಿಬಿತ್ತಿ ಬೆಳಿತಾ ಬಿಸಿಲು ಬೇಗೇನಾ ಸಹಿಸಿಕೊಂಡು ಮಕ್ಕಳು ಸಾಕ್ತಾ ಇದ್ಲು. ಬರ್ತಾ ಬರ್ತಾ ಮನೆ ಆತನಿಗೆ ದೂರವಾಗಿ ಮಠ ಹತ್ರ ಆಯಿತು ಮನೆಗಿಂತ ಮಠವೇ ಹೆಚ್ಚು ಸುಖನಿಸಿತು. ಮನೆ ದಾರಿ ಮರೆತು ಹೋಯಿತು ಕಾವಿ ಮೈಮೇಲೆ ಬಂದಿತ್ತು.
ಇದೆಂಥ ಕಾಯಿಲೆನೋ ಏನು ಅಕ್ಕಾ ನನಗೆ ಉಸಿರಿಲ್ಲದ ಬಸಿರು".
ಈ ರೋಗದ ಬಾದೆ ನನ್ನನ್ನು ಹಿಂಡ್ತಾ ನಡದಾಡಗೊಡುತ್ತಿಲ್ಲ
ತಂದೆ ಅನ್ನಿಸಿಕೊಂಡವನು ಮನೆಯಲ್ಲಿದ್ದು ಸಣ್ಣಪುಟ್ಟ ಕೆಲಸ ಮಾಡಿ ಬಂದು ಹೋಗ್ತಿದ್ರುನು ಬದುಕಿನ ಬಂಡಿ ಸ್ಥಿರ ಕಾಣ್ತಿತ್ತು.
ಗಂಡ ಹೆಂಡರು ಚೆನ್ನಾಗಿದ್ರೆ ಅರೆಕಲ್ ಮೇಲೆ ದುಡಿದು ತಿನ್ನಬಹುದು. ಏನ್ ಮಾಡೋದು, ಇದೇನ್ ಹಣೆಬರಹಾ ಅಂತೀಯಾ ಹೇಳು?
ಯಾವುದೋ ಲಾಭಕ್ಕೆ ಕಾದು ಹೆಂಡ್ತಿ ಮಕ್ಕಳನ್ನ ಕಂಡಂತೆ ಬಿಟ್ಟು ಬೀಡಾಡಿ ದನಗಳ ತರಹ ಹಲ್ಲಿದ್ ಕಡೆ ತಿಂದು ನೀರಿದ್ ಕಡೆ ಕುಡ್ದು ಜೀವನ ಮಾಡುತ್ತಿದ್ದ ಸ್ವಾಮಿ ಕಾವಿ ದರ್ಸಿ ಸ್ವಾಮಿನೇ ಆಗೋದಾನು ಅಂತಾ ಯಾರ್ ಕಂಡಿದ್ರು. ಹಿಂಗೆ ಹಿಂದೆ ಮುಂದೆ ಯೋಚನೆ ಮಾಡದೆ ಬಿಟ್ಟು ಹೋದನು. ಇಂಥೋರು ಲೋಕಕ್ಕೆ ಏನ್ ಉಪದೇಶ ಹೇಳ್ಯಾರು ?ಆಕೆಯದು ನಿತ್ಯ ಇದೇ ಗೊಣಗಾಟ
ಅದ್ಯಾವ್ರಿಗೂ ಕಣ್ಣಿಲ್ಲ. ದುಡ್ಕೊಂಡ್ ತಿನ್ನೋಕೆ ನಮ್ನಾರಾ ಚೆನ್ನಾಗಿಟ್ಯಾನಾ? ಇದೇನು ಹೋಗೋಕ್ ಬಂದಿದೆಯೋ, ತಗೊಂಡು ಹೋಗೋಕ್ಕೇ ಬಂದೀತೋ?
ನನಗೆ, ಈ ಮಗೀನಾ ಕರ್ಕೊಂಡು ಹೋಗಿ ಔಷ್ಧಿ ಕೊಡ್ಸಕ್ಕೆ ಹೋಗೋಕಾಗ್ವಲ್ದು ಕಣೀ ನಾವು ಯಾರಿಗೆ ಹೇಳೋಣ? ಆ ಹುಣ್ಣಿಮೆ ದಿನ ದ್ಯಾವ್ರು ಗುಡಿ ಮುಂದ ಬರುವಾಗ ನಾಯಿ ಕಚ್ಚಿತು ಅಂದ.
ಹ್ವಾದು ವಾರದಿಂದ ಕಣ್ಣೀಗ್ ನಿದ್ದೆ ಮಾಡಿಲ್ಲ ಹಂಗೆ. ಕೆಮ್ತಾವ್ನೆ.
ಹೊತ್ತಾರೆ ಎದ್ದು ಅಲ್ಲಿ ಯಾರೋ ಔಷ್ಧಿ ಕೊಡುತ್ತಾರಂತೆ ತಗೊಂಬರೋಗೋ ಅಂದ್ರೆ ಆರು ಹುಡೋದೇ ಮೇಲು ಅಂತ ಹೋಗ್ಯಾನಲ್ಲಾ ನಾ ಯಾರ್ಗೆ ಹೇಳ್ಲಿ ಅಕ್ಕಾ!
ಬಾ ಒಂದು ಮಂಕರಿ ಸಗಣಿ ಅದೇ ಅಲ್ಲಿ ಬೆಣ್ಣಿ ತೊಟ್ಟಿ ಬತ್ತೀನಿ. ಹೊರ್ಸು ಬಾ.
ತಲೆ ಮೇಲೆ ಸಿಂಬಿಹಾಕಿ, ಹಟ್ಟಿ ಗುಡಿಸ್ತಾ ಇದ್ದ ಮರಿಯವ್ವನೊಂದಿಗೆ ಗೊಣಗಿಕೊಂಡ್ಲು.
ಊರ ಹಿಂದ್ಲ ಹೊಲಕ್ಕೆಸಗಣಿ ಹೊತ್ತೋದ ಆಕೆ ಕಾಲ್ವೆ ಧಾಟೋವಾಗ ಎಡವಿ ಬಿದ್ದೋಳು. ತಾನೇ ಹೊಗೆ ಆಗಿಹೋದ್ಲು.
ಆ ಪುಣ್ಯಾತ್ಗಿತ್ತಿ ಹೆಣ್ಬೇಕು ಹೆಣ್ಬೇಕು ಅಂತ ನಾಕು ಗಂಡ್ಮಕ್ಳಾದರೂ ಕಾಯ್ದಬಿಟ್ಲು. ಆದರೀಗ ಆಕೆಗೆಲ್ಲಿಂದಾ ಬಂತೋ ಈ ಹಾಳಾದ್ದು "ಬಾನ್ ಬಸಿರು" ಅನ್ನೋ ಮಾರಿ. ಪಾಪ ಮಕ್ಕಳು ಅನಾಥವಾದರು, ಅವನು ಕಾವಿ ತೊಟ್ಕೊಂಡು ಸುಖ ಪಡ್ಕೊಂಡು ಆನಂದವಾಗಿದ್ದಾನೆ.
ಅವಳಿದ್ದಾಗಲೇ ಬಂದು ಕಷ್ಟ ಸುಖ ನೋಡದವನು. ಇನ್ನೂ ಈಗ ಇರ್ತಾನಾ? ಬೂದಿ ಆರೋಕ್ ಮುಂಚೆ ಮಠ ಬಿದ್ದಾನೆ. ಜನರೆಲ್ಲಾ ತಮ್ಮದೇ ರೀತಿಯಲ್ಲಿ ಅಣಕಿಸಿದ್ರು. ಹೇ ಮಗಾ ನಿಮ್ಮಪ್ಪ ಇದ್ದಾನೆನ್ಲಾ? ಏನಾರ ಒಂದು ದಾರಿ ಮಾರ್ಗ ಮಾಡಿ ಹೋಗ್ತಾನೆ ಅಂದ್ರೆ ಬೆಂಕಿ ಅರಕ್ ಮುಂಚೆ ಮನೆ ಬಿಟ್ಟಾನೂ ನಿಮಗೆ ಆದಾನೇನ್ಲಾ. ದೊಡ್ಡಪ್ಪ ಕೇಳಿದ್ದ.
ಒಟ್ಟಿಗಿದ್ರೆ ಈ ಚಂಗ್ಲು ತಿರುಗೋಕಾಗಲ್ಲ ಅಂತ ಮಕ್ಕಳು ಸಂಸಾರ ಕಟ್ಕೊಂಡು ಹೊರಬಿದ್ದ.
ನಿಮ್ಮವ್ವನೂ ಆರೋಗ್ಯ ಕಡೆಗಣಿಸಿ ದುಡಿತ ದುಡಿತ ಕಣ್ಮುಚ್ಚಿದ್ಲು . ಮುಂದೇನೋ ಈಗ ದೊಡ್ಡಪ್ಪ ಕೇಳಿದ್ರು.
ಮುಂದೇನು? ರೋಟ್ಟೆಲ್ ಬಲ ಐತೆ, ದುಡಿಯೋ ಛಲ ಐತೆ ನಾವು ಅವನ ಮಠ ಬೀಳಲ್ಲ. ಅವ್ವನಂಗೆ ಛಲವಾಗಿ ನಿಂತು ದುಡಿದು ಬದುಕುತೀವಿ. ನಿಂಗಪ್ಪಣ್ಣಯ್ಯ ಅಬ್ಬರಿಸಿದ್ದ. ಎದೆಯೊಳಗಿನ ನೋವು ಹೊರ ಬಿದ್ದಿದ್ದವು.
ನೋವನ್ನ ಎದೆಯಲ್ಲಿ ಅಡಗಿಸಿಕೊಂಡು ಅಪ್ಪ ಕೊಟ್ಟ ಬಿಡಿಗಾಸನ್ನು ಬೇಡ ಅನ್ನೋಕೆ ಆಗದೆ ಅಮ್ಮನ ಶ್ರಾದ್ಧ ಕಾರ್ಯ ಮುಗಿಸಿದ.
ಮೂವರು ತಮ್ಮಂದಿರು ಪುಟ್ಟ ತಂಗಿ ತನ್ನ ಹೆಗಲಿಗೆ ಹೇಗಾದರೂ ಹೊತ್ತು ದಡ ಮುಟ್ಟಿಸಬೇಕು ನಿರ್ಧರಿಸಿದ.
ಮನೇಲಿ ಹೆಣ್ಣ ದಿಕ್ಕಿಲ್ಲ ದುಡಿದು ಬಂದ್ರೆ ಹೊಟ್ಟೆಗೆ ಕೂಳ್ ಹಾಕೋರಿಲ್ಲಾ, ನಾಲ್ಕು ಹಗಲು ಕಳೀಲಿ. ಮುನ್ ಮೊದಲಾಗಿ ಎಲ್ಲಾರ ಒಂದು ಹುಡುಗಿ ನೋಡಿ ಮದುವೆ ಮಾಡೋಣಾ ಅಲ್ಲೀ ವರೆಗೂ ಈ ಚಿಕ್ಕವರಿಬ್ರೂ ನಂಜೊತೆಯಾಗಿರಲಿ ಚಿಕ್ಕಮ್ಮ ನಮ್ಮನ್ನು ಕರ್ಕೊಂಡು ಹೊರಟಿದ್ದರು.
ಆ ದಿನ ಅಣ್ಣ ತಮ್ಮ ಇಬ್ಬರೂ ಒಟ್ಟಿಗೆ ಆರು ಹೂಡಿದ್ರು, ಮಧ್ಯಾಹ್ನಕ್ಕೆ ಆರು ಬಿಟ್ಟು ತಮ ಮುಯ್ಯಳ್ ಕೆಲ್ಸಕ್ ಹೋಗಿದ್ದಾನೆ
ಇತ್ತಾ ನಿಂಗಪ್ಪ ಎತ್ತು ಮೇಯೋಕೆ ಬಿಟ್ಟು ಎರಡು ಗಾಡಿ ಗೊಬ್ಬರ ಚೆಲ್ಲಿ, ಬದಿನಲ್ಲಿದ್ದ ಹುಣಸೆ ಮರದ ಕೆಳಗಡೆ ಹಾಗೆ ಮಲಗಿದ್ದಾನೆ.
ಜೇನುಗೂಡಿನ ಹಾಗೆ ಮೋಡ ಕಪ್ಪಾಗಿದೆ ಗುಡುಗು ಮಿಂಚು ತಣಾರಿಸುತ್ತಿದೆ. ಹಕ್ಕಿಪಕ್ಕಿಗಳೆಲ್ಲ ಹಾರರ್ಥ ಗೂಡ್ ಸೇರಿಕೊಳ್ತಾ ಇದ್ದಾವೆ ಬೈಲಿನಲ್ಲಿದ್ದ ಜನರೆಲ್ಲ ಕೂಗಾಡ್ತನೆ ಸೇರಿಕೊಳುತ್ತಿದ್ದಾರೆ.
ಮುಯ್ಯಾಳು ಮುಗಿಸಿ ಮನೆಗೆ ಬಂದ ಮಂಜ ಅಣ್ಣನಿಲ್ಲದೆ ಬರೀ ಎತ್ತುಗಳನ್ನು ನೋಡಿ ಗಾಬರಿ ಅಕ್ಕಪಕ್ಕದವರನ್ನು ಕೇಳಿದ.
ಅಲ್ಲೇ ಮಲಗಿದ್ದ. ಮತ್ತೆ ಬರುವಾಗ ಗಾಬರಿಯಲ್ಲಿ ನೋಡಿಲ್ಲಾ ಅಕ್ಕ ಪಕ್ಕದವರ ಮಾತು.
ಹೊಲದ ಬಳಿ ದೌಡಾಯಿಸಿದ.
ನಿಂಗಪ್ಪಣೆಯಾ ಆ.......ಆ ...ಆ ಕೂಗಿದ.
ಸದ್ದಿಲ್ಲ.
ಹತ್ತಿರ ಬಂದ್ರೆ ಅಣ್ಣನ ಗಂಟಲಿನಿಂದ ಬರುತ್ತಿರುವ ಶಬ್ದ ವಿಚಿತ್ರವಾಗಿದೆ. ಏನೋ ಹೇಳಲು ಹೋಗುತ್ತಿದ್ದಾನೆ ಆಗುತ್ತಿಲ್ಲ.
ಕೈ ಕಾಲುಗಳು ಸ್ವಾಧೀನಕ್ಕೆ ಸಿಗುತ್ತಿಲ್ಲ. ಜೋರಾಗಿ ಮಳೆ ಬೀಳತೊಡಗಿತ್ತು. ಇಬ್ರೂ ನೆನೆಯುತಿದ್ದಾರೆ .
ಯಾರು ಇಲ್ವೇನ್ರಪ್ಪೋ ಓಓಓ ಜೋರಾಗಿ ಕಿರುಚಿದ ಮಂಜ.
ಮಳೆಗಾಳಿಯ ನಡುವೆ ಇವರ ಶಬ್ದ ಮಾರುದೂರವೂ ದಾಟುತ್ತಿಲ್ಲ.
ಇವನ ಕಿರ್ಚಾಟಕ್ಕೆ ಹೊಲದ ಗುಡ್ಲುಗಳಲ್ಲಿ ಆಶ್ರಯ ಪಡೆದಿದ್ದ ಒಂದೆರಡು ಜನ ಓಡಿ ಬರ್ತಾರೆ.
ಹೀಗೆ ಹೀಗೂ ತೋಳ್ಗೈಯಲ್ಲಿ ಹೊತ್ಕೊಂಡ್ ಬಂದು ಗುಡುಮನೆಗೆ ಹಾಕಿದ್ರು. ತಲೆ ಕೂದಲು ಗಂಟ್ ಹಾಕಿದ್ರು. ಬರ್ಲಲ್ಲಿ ಹೊಡೆದ್ರು, ಮಂತ್ರಾಕ್ಷತೆ ಹಾಕಿದ್ರು. ಏನ್ ಮಾಡಿದ್ರು ನಿಂಗಪ್ಪ ಬದಲಾಗಲಿಲ್ಲ. ಮಾತು ಆಡಲಿಲ್ಲ, ಊಟ ಮಾಡ್ಲಿಲ್ಲ.
ಊಟ ತಂದ್ರೆ ಕೈ ಹಾಕದೆ ಬಾಯಲ್ಲಿ ತಿನ್ನಲಿಕ್ಕೆ ಹೋಗ್ತಾನೆ. ಚಿಂತನೆ ನಾಯಿ ತರ ಬೊಗಳುತ್ತಾ ಇದ್ದಾನೆ. ಎಲ್ಲರಿಗೂ ಅಚ್ಚರಿಯ ಊರಿನ ಜನರು ಬಾಯಲ್ಲೆಲ್ಲಾ ಏನೇನು ಸುದ್ದಿಗಳು. ಹುಣಸೆ ಮರದ ಕೆಳಗೆ ಮಲಗಿದ್ದ ಏನೋ ಸೋಕಿನ ಹಾಗೆ ಆಗಿದೆ.
ಇನ್ಯಾರ ಸತ್ತವರು ಇವನೊಳಗೆ ಸೇರಿದ್ದಾರೆ... ಏನೇನೋ ಕಥೆಗಳು ಬೆಳಗಿವವರೆಗೂ ಹರಿದಾಡಿದವು.
ಬೆಳಗ್ಗೆ ಕೊಟ್ಟಿಗೆ ಹಟ್ಟಿ ಗುಡಿಸೋಕೆ ಬಂದ ಮರೆಯವ್ವಾನಿಗೆ ತಾನು ಸಗಣಿ ಉರ್ಸೋಕೆ ಬಂದಾಗ ನಿಂಗಪ್ಪನ ತಾಯಿಂii ಮಾತುಗಳು ನೆಪ್ಪಾದು.
ಅಯ್ಯೋ ನಿಮ್ಮನೆ ಕಾಯುವಾಗ, ಅವನಿಗೇನು ಮಾಡಬೇಡಿ ಕಂಡ್ರೋ, ಈಗ ತಿಂಗಳು ಹಿಂದೆ ಹುಚ್ಚು ನಾಯಿ ಕಡೆದಿತ್ತಂತೆ. ಇವನು ಔಷ್ಧಿ ತಗೊಳದೆ ಅದು ಕೆದ್ಲಿದೆ ಮೊದಲು ದೊಡ್ಡ ಆಸ್ಪತ್ರೆ ಗೆ ಕರ್ಕೊಂಡ್ ಹೋಗಿ. ಬಾರೀ ತಡಮಾಡಿದ್ರಿ. ಹೊರಡಿ ತ್ವರೆಪಡಿಸಿದಳು.
ಗಾಡಿ ಕಟ್ಟಿ ಹುಲ್ಲು ಹಾಕಿ ಎರಡು ಜನ ಅವನನ್ನ ಭದ್ರವಾಗಿ ಗಾಡಿಲಿ ಹಿಡ್ಕೊಂಡು ಕೂರಿಸಿ ಕಾಲ್ಗಳ್ನ ಕಟ್ಟಿಹಾಕಿ, ಆಸ್ಪತ್ರೆಗೆ ಹೊರಟರು.
ಹಾಸನದ ದೊಡ್ಡ ಆಸ್ಪತ್ರೆ ತಲುಪುವುದರೊಳಗಡೆ ಜೀವ ಅರ್ಥ ಬಂದಿತ್ತು.
(ಮುಂದುವರಿಯುವುದು )
0 ಕಾಮೆಂಟ್ಗಳು